Friday, 13 April 2018

ವಾಸ್ತವ

ಹಾರದಿರು ಮನಸೇ ಎಚ್ಚರ
ಕನಸೇ ಜೀವನವಲ್ಲ!!

ಕದಡದಿರು ತಿಳಿನೀರ
ಎದ್ದೀತು ಕೆಸರು

ಕೀಳದಿರು ಗುಲಾಬಿ
ಚುಚ್ಚೀತು ಮುಳ್ಳು

ಸತ್ಯಕ್ಕೆ ಸಾವಿಲ್ಲ
ಎನ್ನುವದೆಲ್ಲ ಸುಳ್ಳು

ಓಡದಿರು ಹುಷಾರು
ಜಾರೀತು ದಾರಿ

ಹಿಡಿಯದಿರು ಪತಂಗ
ಹೋದೀತು ಹಾರಿ

ದಿನಕೊಂದು ಬಣ್ಣ
ಕೋರೈಸಿದೆ ಕಣ್ಣ

ನಿಧಾನಿಸೊ ಮಾನವ
ಬೇರೆಯಿದೆ ವಾಸ್ತವ!!
        ...‌. ಡಾ.ಉಷಾ ಗದ್ದಗಿಮಠ

Tuesday, 10 April 2018

ಭಾವಯಾನ

ಸ್ವಪ್ನಗಳ ಲೋಕದಲಿ
ಭಾವಗಳ ಯಾನ
ಗ್ಯಾಸ್ ಮುಂದೆ ನಿಂತಿದ್ದೆ
ಎಲ್ಲಿಯೋ ಇತ್ತು ಧ್ಯಾನ

ಸುತ್ತಾಡಲು ಹೊರಟಿದ್ದೆ 
ಮೋದೀಜಿಯೊಡನೆ ಡೆಲ್ಲಿ
ವಿಧಿಯಿಲ್ಲ ಕಟ್ಟಲೇಬೇಕಾಯ್ತು
ತೆರಿಗೆಯನು ಅಲ್ಲಿ

ಸಂಭ್ರಮದಿ ಓಡಿಸಿದೆ
ಹೊಸ ಕಾರನು ಗಲ್ಲಿ ಗಲ್ಲಿ
ಪೋಲಿಸಪ್ಪ ಗದರಿದ
ಮೇಡಂ ಲೈಸೆನ್ಸ್ ಎಲ್ಲಿ?

ಕೋಟ್ಯಾಧಿಪತಿ ಆಟದಲಿ
ಆಗಲಿದ್ದೆ ಮಸ್ತ್ ಶೈನ್
ಮೊದಲನೇ ಪ್ರಶ್ನೆಗೇ
ಬೇಕಾಯ್ತು ಲೈಫ್ ಲೈನ್

ಸೌಂದರ್ಯ ಸ್ಪರ್ಧೆಗೆ
ತಯ್ಯಾರಿಯೋ ತಯ್ಯಾರಿ
ಪ್ರಶಸ್ತಿ ಗೆದ್ದಳು
ಯಾವಳೋ ವೈಯ್ಯಾರಿ

ತಡೆಯಿಲ್ಲದೆ ಸಾಗಿತ್ತು
ಕಲ್ಪನೆಯ ತೇರು
ಮಗಳ ಧ್ವನಿ ಕೇಳಿಸಿತು
ಅಮ್ಮಾ ಆಯ್ತಾ ಸಾರು?
               ಡಾ.ಉಷಾ ಗದ್ದಗಿಮಠ                      

ಕಿರುಕತೆ -- ಕನಸು

ಕನಸು

ಸಭೆಯಲ್ಲಿ ಪ್ರಚಂಡ ಕರತಾಡನ.  ನಿರೂಪಕರ ಧ್ವನಿ ಕಿವಿ ತುಂಬಿತು."  ಈ ವರ್ಷದ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಉದಯೋನ್ಮುಖ  ಕತೆಗಾರ್ತಿ ಉಮಾ ದೇವಿಯವರ  ಕನಸು ಕಥೆಗೆ  ನೀಡಲಾಗಿದೆ.  ಶ್ರೀಮತಿಯವರಿಗೆ ಗೌರವಾನ್ವಿತ ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ......" ನವಿಲಿನ ನಡಿಗೆಯಲ್ಲಿ ವೇದಿಕೆಯೇರುತ್ತಿದ್ದಂತೆ ಮನಸ್ಸು ಹಿಂದಕ್ಕೆ ಓಡಿತು. '' ಅದೆಂತಾ ಹಾಳು ಮೂಳು ಬರಿತಿಯೆ ಕೂಸೆ, ಶಾಲೆ ಪುಸ್ತಕ ಓದು. " ಎಂದು ಆಯಿ ಮುಲಾಜಿಲ್ಲದೆ ನನ್ನ ಸಣ್ಣ ಪುಟ್ಟ ಬರಹಗಳ ನೋಟ್ ಬುಕ್ ಅನ್ನು ಕಸಿದು ತಿಂಡಿ ‌ತಿನ್ನಲು ಬಳಸಿದಾಗಲೇ  ಲೇಖಕಿಯಾಗುವ ಕನಸು ಕಮರಿತ್ತು. ಮುಂದೆ ಮದುವೆಯಾಗಿ ಮಕ್ಕಳು -ಸಂಸಾರದ ಜಂಜಾಟದ ನಡುವೆ ಒಮ್ಮೆ ಕಳಿಸಿದ ಕಿರುಗತೆ ಸಂಪಾದಕರಿಂದ ವಾಪಸ್ ಬಂದಾಗ " It is not your cup of tea " ಯಜಮಾನರೆಂದಿದ್ದು ಅಸಹನೀಯವನಿಸಿತ್ತು. ಇತ್ತೀಚೆಗೆ ತುಕ್ಕು ಹಿಡಿದ ಮನಸ್ಸನ್ನು ತಿಳಿಗೊಳಿಸಲು ಲೇಖಕಿಯರ ಸಂಘಕ್ಕೆ ಸೇರಿಕೊಂಡಾಗಿನಿಂದ ಕನಸು ಗರಿಗೆದರಿತ್ತು. ಗೆಳತಿಯರ ಒತ್ತಾಸೆಯಿಂದ ಕಥೆ ಬರೆದು ಕಳುಹಿಸಿಯೇ ಬಿಟ್ಟಿದ್ದೆ.  ಪ್ರಶಸ್ತಿ ಸ್ವೀಕರಿಸಿ ಮಾತನಾಡಲು ಮೈಕ್ ಎದುರಿಗೆ ನಿಂತಾಗ ಹೃದಯ ತುಂಬಿ ಬಂದಿತ್ತು....  ಕನಸುಗಳೆಂದೂ ಸಾಯುವದಿಲ್ಲ. ಕನಸುಗಳಿಗೆ ಕೊನೆಯಿಲ್ಲ......‌ನನ್ನ ಮಾತು ಸಾಗುತ್ತಿದ್ದಂತೆ ಚಪ್ಪಾಳೆಯ ಸುರಿಮಳೆ........ಡಾ. ಉಷಾ ಗದ್ದಗಿಮಠ

ಕಿರುಕತೆ -- ಕೊಡುಗೆ



'ಅಮ್ಮಾ, ಅಮ್ಮಾ,  ಇವತ್ತು ನಿನ್ನಹುಟ್ಟಿದ ಹಬ್ಬ ಅಲ್ವಾ? ಏನು celebration?? ' ಮಗಳು ಮುದ್ದುಗರೆದಳು.ಪಲಾವ್ , ಕೇಸರಿಭಾತ್ ,ಬೋಂಡಾ ರೆಡಿಯಾಗುವಷ್ಟರಲ್ಲಿ ಯಜಮಾನರ ಆಗಮನವಾಯಿತು. ಕೈಯಲ್ಲಿ ಗಿಫ್ಟ್ ಪ್ಯಾಕೆಟ್. ಅಚ್ಚ ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ. ಮೆಚ್ಚುಗೆಯಿಂದ ಯಜಮಾನರೆಡೆಗೆ ನೋಡಿದಾಗ ಅವರ ಕಣ್ಣಲ್ಲಿ ಧನ್ಯತೆಯ ಭಾವ. ಮಗಳು ಮುನ್ನಾದಿನವೇ ಸುಂದರವಾದ ವಾಚ್ ಒಂದನ್ನು  ನನಗಾಗಿ ತಂದಿಟ್ಟಿದ್ದಳು . ಮಗ ತಂದ ಹನಿಕೇಕ್ ಕತ್ತರಿಸಿ ಎಲ್ಲರ ಕೊಡುಗೆ, ಶುಭಾಶಯಗಳ ನಡುವೆ ವಿಶೇಷ ಅಡಿಗೆ ಸವಿಯುಷ್ಟರಲ್ಲಿ ಘಂಟೆ ಮೂರು. ಕೆಲಸದವಳ ಸುಳಿವಿಲ್ಲ. ನಿಂಗವ್ವ ಮೊನ್ನೆಯಿಂದಲೂ ಕೆಮ್ಮು, ನೆಗಡಿ ಎಂದು ನರಳುತ್ತಿದ್ದುದು ನೆನಪಾಯ್ತು. ಹಾಸಿಗೆ ಹಿಡಿದು ಮಲಗಿದಳೇನೋ ಎಂದಕೊಳ್ಳುವಷ್ಟರಲ್ಲಿ ಕೆಮ್ಮುತ್ತಾ ಬಂದವಳಿಗೆ ದಮ್ಮು ಹತ್ತಿತ್ತು. ಉಸಿರಾಟದ ತೊಂದರೆಗಾಗಿ  ಡಾಕ್ಟರ್ ಬರೆದುಕೊಟ್ಟ inhaler ಸಹಿತ ಕೊಂಡುಕೊಳ್ಳಲಾರದೆ ಒದ್ದಾಡುವವಳನ್ನು ಕಂಡು ಕಸಿವಿಸಿಯಾಗಿ ಅತ್ತೆಯವರು ಇಲ್ಲಿ ಬಂದಾಗ ಉಪಯೋಗಿಸುತ್ತಿದ್ದ ಹಳೆಯ inhaler  ಅನ್ನು ತಂದು ಅವಳ ಕೈಗಿತ್ತೆ. ಅದರಿಂದ ನಾಲ್ಕೈದು ಬಾರಿ  ದೀರ್ಘವಾಗಿ ಉಸಿರೆಳೆದುಕೊಂಡು , ಸುಧಾರಿಸಿಕೊಂಡು ಅವಳು ಎಂದಿನಂತೆ ಕೆಲಸ ಮಾಡತೊಡಗಿದಾಗ ಮನಸ್ಸಿಗೆ ನಿರಾಳವಾಯ್ತು. ಮರುದಿನ ಒಳ್ಳೆ ಗೆಲುವಾಗಿಯೇ  ಬಂದವಳು " ಅವ್ವಾರ, ನೀವು ಕೊಟ್ಟ ಯಂತ್ರ ಭಾಳ ಉಪಯೋಗ ಐತ್ರಿ. ಹುಟ್ಟಿದ ಹಬ್ಬದ ದಿನ ನನಗೆ ಚೊಲೊ ಗಿಫಟ್ ಕೊಟ್ಟೀರಿ . ನಿಮ್ಮನ್ನ ದೇವರು ನೂರ್ ವರ್ಸಾ ಚೆಂದಾಗಿಡ್ಲಿ. " ಕಿವಿಯವರೆಗೂ ಬಾಯಗಲಿಸಿ ಅವಳು ನಗುತ್ತಿದ್ದಂತೆ   'ನಮ್ಮಿಬ್ರದ್ದೂ ಹುಟ್ಟಿದ ದಿನ ಒಂದೇರಿ ಅವ್ವಾರ '  ಎಂದು ಯಾವಾಗಲೋ ಅವಳೆಂದಿದ್ದು ನನಗೆ ಒಮ್ಮೆಲೆ ನೆನಪಾಗಿ ಕಣ್ಣಂಚಿನಲ್ಲಿ ಒಸರಿದ ನೀರನ್ನು ಮೆಲ್ಲನೆ ಒರೆಸಿಕೊಂಡು ಮುಗುಳ್ನಗೆ ಬೀರಿದೆ...........
                   ಡಾ. ಉಷಾ ಗದ್ದಗಿಮಠ

Monday, 2 April 2018

ಬಾಲ್ಯ

ಬಾಲ್ಯ ಎಂದೊಡನೆ
ನೆನಪುಗಳ ಹಚ್ಚನೆಯ ತೋರಣ.ಮನಸಿಗೆ ನಚ್ಚನೆಯ ಕಚಗುಳಿ. ತುಂಬಿದ ಮನೆ. ನಾವು ಹನ್ನೊಂದು ಮಕ್ಕಳು. ಇಂದು ಒಬ್ಬರನ್ನೋ ಇಬ್ಬರನ್ನೋ ಬೆಳೆಸಲು ಪಾಲಕರು ಹೆಣಗಾಡುವದನ್ನು ಕಂಡಾಗಲೆಲ್ಲ ನನ್ನ ತಂದೆ-ತಾಯಿ ನೆನಪಾಗುತ್ತಾರೆ ಯಾವುದಕ್ಕೂಅತಿಯಾಗಿ ತಲೆ ಕೆಡಿಸಿಕೊಳ್ಳದ ವಿಚಿತ್ರ ಸ್ಥಿತಪ್ರಜ್ನತೆ ಅವರಲ್ಲಿತ್ತು. ನಮಗ್ಯಾರಿಗೂ ವಿಶೇಷ ಗಮನವನ್ನು ಅವರು ಕೊಡಲಾಗದಿದ್ದರೂ ಅಲಕ್ಷವನ್ನೂ ಮಾಡಲಿಲ್ಲ. ಚೆನ್ನಾಗಿಯೇ ಬೆಳೆದೆವು. ದೊಡ್ಡ ಮಕ್ಕಳಿಗೆ ಸಣ್ಣವಾದ ಬಟ್ಟೆಗಳು ಚಿಕ್ಕವರಿಗೆ. ವರ್ಷಕ್ಕೆ ಎರಡೇ ಜೋಡಿ ಹೊಸ ಬಟ್ಟೆ. ಅದು ಮದುವೆ-ಮುಂಜಿ ಮುಂತಾದೆಡೆ ಹೋಗುವಾಗ ತೊಡಲು. ನಮ್ಮ ನಮ್ಮಲ್ಲೇ ಉಡುಪುಗಳನ್ನು ಅದಲು-ಬದಲು ಮಾಡಿಕೊಳ್ಳುತ್ತಿದ್ದೆವು. ಹೆಚ್ಚಿನ ಸುಖ-ಸವಲತ್ತುಗಳಿರದೇ ಇದ್ದರೂ ಯಾವತ್ತೂ ಕೊರತೆ, ಕೊರಗು ಕಾಡಲಿಲ್ಲ . ತಂದೆಯವರು ಊರಿನ ಶಾನುಭೋಗರಾದುದ್ದರಿಂದ ಸದಾ ಮನೆಯಲ್ಲಿ ಜನಜಂಗುಳಿ. ಚಹಾ ಮಾಡುವ ಒಲೆಯೇ ಬೇರೆಯಿತ್ತು. ಅದರ ಮೇಲೆ ದಿನವಿಡೀ ಚಹದ ತಪ್ಪಲೆ.(ಪಾತ್ರೆ) ಇದಿಷ್ಟು ಮನೆಯ ವಾತಾವರಣವಾದರೆ, ನಮ್ಮ ತುಂಟಾಟಗಳ ಕಥೆಯೇ ರೋಚಕ. ಎಂಟು ಮಂದಿ ಅಣ್ಣ-ತಮ್ಮಂದಿರ ನಡುವೆ ಬೆಳೆದ ನನಗೆ ಗಂಡುಬೀರಿಯೆಂತಲೇ ಹೆಸರು ಬಿದ್ದಿತ್ತು. ಲಗೋರಿ, ಡಪ್ಪಾಂಡುಪ್ಪಿ ಆಡಿ ಮನೆ ಸೇರುವಾಗ ರಾತ್ರಿ ಎಂಟು ಹೊಡೆದಿರುತ್ತಿತ್ತು. ಮೆಲ್ಲಗೆ ಆಯಿಯ ಕಣ್ಣು ತಪ್ಪಿಸಿ ಓದಲು ಕೂಡುವದು.ಒಮ್ಮೆ ಶಾಲೆಗೆ ತಡವಾಗಿ ಹೋದಾಗ ಪ್ರಮೀಳಕ್ಕೋರು (ಮೇಡಂ) ಗಾಳಿ ಮರದ ಬರಲು(ಕೋಲು) ತರಿಸಿ ಅಂಗೈ ಮೇಲೆ ಒಂದು,ಎರಡು,ಮೂರು ಹೊಡೆಯುತ್ತಿದ್ದಂತ್ತೆ ಸರಕ್ಕನೆ ಕೋಲು ಕಸಿದು ನಾನು ತಿರುಗಿ ಹೊಡೆದಿದ್ದು ಊರಲ್ಲೆಲ್ಲ ದೊಡ್ಡ ಸುದ್ದಿಯಾಗಿ, ಎಲ್ಲರೂ ನನ್ನನ್ನು ವಿಚಿತ್ರವಾಗಿ ನೋಡತೊಡಗಿದ್ದು,ಶಿಕ್ಷೆ ಯ ರೂಪವಾಗಿ ನನಗೆ ಶಾಲೆಯ ಸುತ್ತಲೂ ಹತ್ತು ಸುತ್ತು ಓಡಲು ಹಚ್ಚಿದ್ದು , 'ಶಾನುಭೋಗರ ಮನೆ ಕೂಸು ಅಕ್ಕೋರಿಗೇ ಹೊಡತ್ತಡಲೇ' ಎಂಬ ಹಣೆಪಟ್ಟಿ ನನಗೆ ಬಿದ್ದಿದ್ದು , ಸಿಹಿ-ಹುಳಿ ನೆನಪುಗಳ ಮೆರವಣಿಗೆ. ಏನೇ ಇದ್ದರೂ ಬಾಲ್ಯದ ಆಟಪಾಟ,ಹಟ ಎಲ್ಲವೂ ಎಂದೆಂದೂ ಮರೆಯಲಾರದ ನೆನಪಿನ ಬುತ್ತಿ...........ಉಷಾ ಗದ್ದಗಿಮಠ

ಕವಿತೆ

ಎದೆಯ ಗೂಡಿನಲ್ಲಿ ಭಾವನೆಗಳ ದೀಪ
ಹೇಗೆ ಬಣ್ಣಿಸಲೆ ಕವಿತೆ ನಿನ್ನಯ ರೂಪ

ವಿರಹಿಗಳಿಗೆ ನೀನು ನೆನಪುಗಳ ಭಾರ
ಶಬ್ಧಗಳ ಹಾರ ಪಂಡಿತೋತ್ತಮರಿಗೆ

ಪ್ರೇಮಿಗಳಿಗೆ ನೀನೆ ಪ್ರೀತಿಯ ಮಾಲೆ
ಉಪಮೆಗಳ ಸಾಲು ಕವಿ ಪುಂಗವರಿಗೆ

ವಿಚಾರವಂತರಿಗೆ ನೀನೆ ತಾರ್ಕಿಕ ಶಕ್ತಿ
ನೀನೆ ಭಕ್ತಿಯು ಅನುಭಾವಿಗಳಿಗೆ

ಕಲ್ಪನೆಯ ಓಟ ನೀ ಕಾವ್ಯರಸಿಕರಿಗೆ
ಸಹೃದಯರಿಗೆ ನೀನೆ ರಸದೂಟವು

ಮನವ ತುಂಬಿದೆ ಇಂದು
ಕಾವ್ಯ ಕನ್ನಿಕೆಯ ಗುಂಗು
ಆಹಾ! ಎಂಥಾ ಸೊಗಸು
ಈ ಕವಿತೆಯಾ ರಂಗು!!

                ಉಷಾ ಗದ್ದಗಿಮಠ

ದಿವ್ಯ ಪಯಣ

ಕರೆದೊಯ್ಯುವೆ ಬಾರೆ
ದಿವ್ಯ ಪಯಣಕೆ ನಿನ್ನ
ಹೀಗೇಕೆ ನಿಧಾನ
ಅವಸರಿಸು ಬಾ

ಬೆನ್ನು ಬಾಗಿದೆ ಇಂದು
ಬದುಕ ಹೊರೆಯನು ಹೊತ್ತು
ಸಾಗುವದು ಬಹಳವಿದೆ
ಅನುಸರಿಸಿ ಬಾ

ಬಾಳ ಹಾದಿಯಲಿಂದು
ಎಷ್ಟೊಂದು ಮಜಲುಗಳು
ಸೋತು ಹೋದೆಯ ನಲ್ಲೆ
ಕಸುವಿಲ್ಲವೆ?

ಹೆದರದಿರು ಬೆದರದಿರು
ಕುಗ್ಗಿ ನೀ ನಿಲ್ಲದಿರು
ಕೈ ಹಿಡಿದು ನಡೆಸಲು
ನಾನಿಲ್ಲವೆ?

ಛಳಿ ಬಿಸಿಲು ಮಳೆ ಗಾಳಿ
ಸುಖ ದುಃಖದಾಟದಲಿ
ಜೊತೆಯಲಾಡುವೆ         
ಬಾರೆ ಪ್ರಾಣಸಖೀ

ತಲೆ ನೆರೆದು ಭುಜ ಬಾಗಿ
ಕಣ್ಣೋಟ ಮಂಜಾಗಿ
ಬೊಚ್ಚು ನಗೆಯಲೂ
ನೀನೆ ಚಂದ್ರಮುಖೀ

ಬಾರೆ ನೀ ಸಂಗಾತಿ
ಕನಸುಕಂಗಳ ಗೆಳತಿ
ಜಗವೆಲ್ಲ ಸುತ್ತೋಣ
ಕಣ್ಣಾಗು ಬಾ

ಉಸಿರು ನಿಲ್ಲುವ ಮುನ್ನ
ಪಯಣ ಮುಗಿಯುವ ಮುನ್ನ
ಸಾಂಗತ್ಯದಾನಂದ
ಸವಿಯೋಣ ಬಾ
           
  ....ಡಾ. ಉಷಾ ಗದ್ದಗಿಮಠ